Featured News

ಡಿಎಪಿ ರಸಗೊಬ್ಬರ: ಸಬ್ಸಿಡಿ ಮೊತ್ತ ₹ 1,200ಕ್ಕೆ ಹೆಚ್ಚಳ

ಡಿಎಪಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯ ಪ್ರಮಾಣವನ್ನು ಕೇಂದ್ರ ಸರ್ಕಾರವು ಬುಧವಾರ ಶೇಕಡ 140ರಷ್ಟು ಹೆಚ್ಚಿಸಿದೆ. ಇದಕ್ಕೆ ಸರ್ಕಾರವು ₹ 14,775 ಕೋಟಿ ವಿನಿಯೋಗಿಸಲಿದೆ. ಡಿಎಪಿ ರಸಗೊಬ್ಬರದ ಬೆಲೆಯಲ್ಲಿ ತೀವ್ರ ಹೆಚ್ಚಳ ಆಗಿದ್ದರೂ, ರೈತರಿಗೆ ಇದು ಹಳೆಯ ಬೆಲೆಯಲ್ಲೇ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ಕ್ರಮ ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಪ್ರಧಾನಿಯವರ ಕಚೇರಿಯ ಹೇಳಿಕೆ ತಿಳಿಸಿದೆ. ಡಿಎಪಿ ರಸಗೊಬ್ಬರವನ್ನು ದೇಶದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ.

‘ಡಿಎಪಿಯ ಪ್ರತಿ ಚೀಲಕ್ಕೆ ನೀಡುತ್ತಿದ್ದ ₹ 500 ಸಬ್ಸಿಡಿಯನ್ನು ₹ 1,200ಕ್ಕೆ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಇಂದಿನ ತೀರ್ಮಾನದ ಪರಿಣಾಮವಾಗಿ ರೈತರು ₹ 1,200 ಬೆಲೆಗೆ ಒಂದು ಚೀಲ ಡಿಎಪಿ ಪಡೆಯಲಿದ್ದಾರೆ. ಬೆಲೆಯಲ್ಲಿ ಆಗಿರುವ ಏರಿಕೆಯ ಹೊರೆಯನ್ನು ತಾನೇ ಹೊರುವ ತೀರ್ಮಾನವನ್ನು ಕೇಂದ್ರ ಕೈಗೊಂಡಿದೆ. ಸಬ್ಸಿಡಿ ಮೊತ್ತವನ್ನು ಒಂದೇ ಬಾರಿಗೆ ಈ ಪ್ರಮಾಣದಲ್ಲಿ ಯಾವತ್ತೂ ಹೆಚ್ಚಿಸಿರಲಿಲ್ಲ’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಹಿಂದಿನ ವರ್ಷ ಒಂದು ಚೀಲ ಡಿಎಪಿ ಬೆಲೆ ₹ 1,700 ಆಗಿತ್ತು. ಇದಕ್ಕೆ ಕೇಂದ್ರವು ₹ 500ರಷ್ಟು ಸಬ್ಸಿಡಿ ನೀಡುತ್ತಿತ್ತು. ಹಾಗಾಗಿ, ಕಂಪನಿಗಳು ರಸಗೊಬ್ಬರವನ್ನು ರೈತರಿಗೆ ಪ್ರತಿ ಚೀಲಕ್ಕೆ ₹ 1,200ರಂತೆ ಮಾರಾಟ ಮಾಡುತ್ತಿದ್ದವು.

Also read  ಕೊಳೆರೋಗದಿಂದ ಕಾಫಿ ಉದುರಲು ಕಾರಣಗಳು ಮತ್ತು ಪರಿಹಾರ