Black pepper

ಕಾಳು ಮೆಣಸು ದರ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರ

ದೇಶದಲ್ಲಿ ಅತಿ ಹೆಚ್ಚು ಕಾಳು ಮೆಣಸು ಉತ್ಪಾದಿಸುವ ರಾಜ್ಯವೆನಿಸಿರುವ ಕರ್ನಾಟಕದಲ್ಲಿ ಫಸಲಿನ ಕೊಯ್ಲು ಆರಂಭವಾಗಿದ್ದು, ಮಾರ್ಚ್‌ ತಿಂಗಳಿನಲ್ಲಿ ಬೆಳೆ ಮಾರುಕಟ್ಟೆಗೆ ಬರಲಿದೆ. ಸದ್ಯಕ್ಕೆ ಕಳೆದ ತಿಂಗಳಿಗೆ ಹೋಲಿಸಿದರೆ ದರ ಇಳಿಕೆಯಾಗಿದೆ. ಜನವರಿಯಲ್ಲಿ ಕೆ.ಜಿಗೆ 620 ರೂ.ನಷ್ಟಿದ್ದ ದರ ಈಗ 585 ರೂ.ಗೆ ತಗ್ಗಿದೆ. ಹೀಗಿದ್ದರೂ, ಉತ್ಪಾದನೆ ಕುಸಿದಿರುವ ಪರಿಣಾಮ ಮುಂಬರುವ ತಿಂಗಳುಗಳಲ್ಲಿ ದರ ಏರಿಕೆಯಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.

ಉತ್ಪಾದನೆ ಕುಸಿತ:

ಈ ವರ್ಷ ಕರ್ನಾಟಕ, ಕೇರಳ ಎರಡೂ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಬೆಳೆಯ ಉತ್ಪಾದನೆ ತಗ್ಗಿದೆ. ವಿಯೆಟ್ನಾಂ, ಇಂಡೊನೇಷ್ಯಾದಲ್ಲೂ ಇದೇ ಪರಿಸ್ಥಿತಿ. ಹೀಗಾಗಿ ದರ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಅದಕ್ಕಾಗಿ ಏಪ್ರಿಲ್‌ ಮಧ್ಯ ಭಾಗದ ತನಕ ಕಾಯುವುದು ಉತ್ತಮ. ರಂಜಾನ್‌, ದೀಪಾವಳಿ, ದಸರಾ ಸಂದರ್ಭದಲ್ಲೂ ಕಾಳು ಮೆಣಸಿಗೆ ದರ ಏರುತ್ತದೆ ಎನ್ನುತ್ತಾರೆ ಕೊಡಗಿನ ಬೆಳೆಗಾರ ಎಂ.ಜಿ.ಹೊಯ್ಸಳ.

ಮಿಶ್ರ ಪ್ರತಿಕ್ರಿಯೆ:

ಜಾಗತಿಕ ಕಾಳು ಮೆಣಸು ಮಾರುಕಟ್ಟೆಯಲ್ಲಿ ಫೆ.3ಕ್ಕೆ ಅಂತ್ಯವಾದ ವಾರದಲ್ಲಿ ಧಾರಣೆ ಏರಿಳಿತಗಳಿಂದ ಕೂಡಿತ್ತು ಎಂದು ಇಂಟರ್‌ನ್ಯಾಶನಲ್‌ ಪೆಪ್ಪರ್‌ ಕಮ್ಯುನಿಟಿ (ಐಪಿಸಿ) ವರದಿ ತಿಳಿಸಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಕಾಳು ಮೆಣಸು ಕೊಯ್ಲು ಭರದಲ್ಲಿ ಸಾಗುತ್ತಿರುವುದರಿಂದ, ಹಿಂದಿನ ವಾರಗಳಿಗೆ ಹೋಲಿಸಿದರೆ ಕೊಚ್ಚಿ ಮಾರುಕಟ್ಟೆಯ ದರದಲ್ಲಿ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.

‘ಮುಂಬರುವ ಅಕ್ಟೋಬರ್‌ ವೇಳೆಗೆ ಕಾಳು ಮೆಣಸಿನ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಬೆಳೆಗಾರರು ಸ್ವಲ್ಪ ಕಾದು ನೋಡಿ ಮಾರಾಟ ಮಾಡುವುದು ಸೂಕ್ತ. ಆದರೆ ಇದು ಎಲ್ಲ ಬೆಳೆಗಾರರಿಗೂ ಸಾಧ್ಯವಿರುವುದಿಲ್ಲ. ಅವಶ್ಯಕತೆ ಇರುವವರು ಬೇಕೆನಿಸಿದಾಗ ಮಾರುತ್ತಾರೆ’ ಎನ್ನುತ್ತಾರೆ ಮಂಗಳೂರು ಮೂಲದ ಕಾಳುಮೆಣಸು ಮಾರುಕಟ್ಟೆ ಕಂಪನಿ ಪ್ರಜೀತಾ ಸ್ಪೈಸಸ್‌ನ ಜಿತೇಂದ್ರ ಕುಮಾರ್‌ ಎನ್‌.ಎಸ್‌.

ಕರ್ನಾಟಕ ಕಳೆದ 2014-15ರಲ್ಲಿ ಕಾಳು ಮೆಣಸು ಉತ್ಪಾದನೆಯಲ್ಲಿ ನೆರೆಯ ಕೇರಳವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿತ್ತು. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.40ಕ್ಕೂ ಹೆಚ್ಚು ಪಾಲನ್ನು ತನ್ನದಾಗಿಸಿತ್ತು. ಆ ಸಾಲಿನಲ್ಲಿ ದೇಶದಲ್ಲಿ ಒಟ್ಟು 70,000 ಟನ್‌ ಉತ್ಪಾದನೆಯಾಗಿದ್ದರೆ, ಕರ್ನಾಟಕದಲ್ಲಿ 33,000 ಟನ್‌ ಮತ್ತು ಕೇರಳದಲ್ಲಿ 28,000 ಟನ್‌ ಆಗಿತ್ತು. 2013-14ರಲ್ಲಿ ಕರ್ನಾಟಕದಲ್ಲಿ 16 ಸಾವಿರ ಟನ್‌ ಮತ್ತು ಕೇರಳದಲ್ಲಿ 20 ಸಾವಿರ ಟನ್‌ ಉತ್ಪಾದನೆಯಾಗಿತ್ತು.

ಬಿಳಿ ಕಾಳುಮೆಣಸಿಗೆ ಕೆ.ಜಿಗೆ 1000 ರೂ. ದರ!

ಕಾಳು ಮೆಣಸಿನ ಸಿಪ್ಪೆ ಬೇರ್ಪಡಿಸಿ ತಯಾರಿಸುವ ಬಿಳಿ ಬಣ್ಣದ ಕಾಳುಮೆಣಸಿಗೆ ಪ್ರತಿ ಕೆ.ಜಿಗೆ 1,000 ರೂ. ದರವಿದೆ. ಆದರೆ ಇದನ್ನು ಬೇರ್ಪಡಿಸುವ ಕೆಲಸ, ಕಾರ್ಮಿಕ ಕೇಂದ್ರಿತವಾದ್ದರಿಂದ ಬೆಳೆಗಾರರು ಅಷ್ಟಾಗಿ ಆಸಕ್ತಿ ವಹಿಸುತ್ತಿಲ್ಲ. ನೂಡಲ್ಸ್‌ ತಯಾರಿಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.

ವರಧಿ:ವಿಜಯ ಕರ್ನಾಟಕ

Also read  Black pepper slips on new arrival

Leave a Reply