ನಿರಂತರ ಮಳೆಗೆ ಕಾಫಿ ಉತ್ಪಾದನೆ ಕುಸಿತ: 30,000 ಟನ್ ನಷ್ಟ
ಈ ವರ್ಷ ಮೇ ತಿಂಗಳಿಂದ ನವೆಂಬರ್ ಮಧ್ಯಭಾಗದವರೆಗೆ ನಿರಂತರವಾಗಿ ಸುರಿದ ಮಳೆಯ ಪರಿಣಾಮವಾಗಿ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಕಾಫಿ ತೋಟಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ (KPA) ತಿಳಿಸಿದೆ.
ಉತ್ಪಾದನೆ 4,03,000 ಟನ್ನಿಂದ 3,73,000 ಟನ್ಗೆ ಕುಸಿತ
2025–26ರಲ್ಲಿ ಭಾರತದ ಕಾಫಿ ಉತ್ಪಾದನೆ 4,03,000 ಟನ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿರಂತರ ಮಳೆ, ತಂಪು ಹವಾಮಾನ ಹಾಗೂ ಬಿಸಿಲಿನ ಕೊರತೆಯಿಂದಾಗಿ ಈ ಬಾರಿ ಉತ್ಪಾದನೆ ಸುಮಾರು 30,000 ಟನ್ ಕುಸಿದು 3,73,000 ಟನ್ ಆಗುವ ಸಾಧ್ಯತೆ ಇದೆ.
ಈ ವರ್ಷ ಅರಬಿಕಾ ಉತ್ಪಾದನೆ 1,18,125 ಟನ್ ಎಂದು ನಿರೀಕ್ಷಿಸಲಾಗಿದ್ದರೂ, ಮಳೆಯ ಪರಿಣಾಮದಿಂದ 1,00,000 ರಿಂದ 1,20,000 ಟನ್ ಮಾತ್ರ ಸಿಗುವ ಸಾಧ್ಯತೆ ಇದೆ. ಹಾಗೆಯೇ ರೋಬಸ್ಟಾ ಉತ್ಪಾದನೆ 2,84,875 ಟನ್ ಅಂದಾಜಿತವಾಗಿದ್ದರೂ, ಈಗ 2,60,000 ರಿಂದ 2,70,000 ಟನ್ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ.
ಮೇ ತಿಂಗಳಿಂದ ಅಕ್ಟೋಬರ್ವರೆಗೆ ಸುರಿದ ನಿರಂತರ ಮಳೆ, ತಂಪು ಹವಾಮಾನ ಮತ್ತು ಬಿಸಿಲಿನ ಕೊರತೆಯಿಂದ ಎಲೆ-ಕಾಂಡ ಕೊಳೆ ರೋಗಗಳು ತೋಟಗಳ ಉತ್ಪಾದನಾ ಶಕ್ತಿ ಕುಸಿತ ಉಂಟಾಗಿದೆ. ಭಾರತದೆಲ್ಲೆಡೆ ಇರುವ ಒಟ್ಟು 4.65 ಲಕ್ಷ ಹೆಕ್ಟೇರ್ ಕಾಫಿ ಪ್ರದೇಶದಲ್ಲಿ ಕರ್ನಾಟಕದ ಪಾಲು 2.46 ಲಕ್ಷ ಹೆಕ್ಟೇರ್ ಆಗಿದ್ದು, ದೇಶದ 70% ಕಾಫಿ ಉತ್ಪಾದನೆ ಕರ್ನಾಟಕದಲ್ಲೇ ನಡೆಯುತ್ತದೆ. ಆದರೆ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ತೀವ್ರ ಹವಾಮಾನ ಬದಲಾವಣೆಗಳಿಂದ ಬೆಳೆ ಪ್ರದೇಶವೂ, ಉತ್ಪಾದನಾ ಶಕ್ತಿಯೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿವೆ ಎಂದು KPA ಅಧ್ಯಕ್ಷ ಎ. ಅರವಿಂದ್ ರಾವ್ ತಿಳಿಸಿದ್ದಾರೆ.
