Featured NewsWeather

ಚಿಕ್ಕಮಗಳೂರು ವರ್ಷದ ಮೊದಲ ಮಳೆ:ಬೆಳೆಗಾರರಿಗೆ ಖುಶಿ ಮತ್ತು ಸಂಕಷ್ಟ

ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಹದ ಮಳೆ ಸುರಿಯಿತು.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಗುಡುಗು,ಮಿಂಚಿನೊಂದಿಗೆ ಕೆಲವು ಕಡೆ ಅರ್ಧ ಇಂಚಿನಿಂದ 2 ಇಂಚಿನವರೆಗೂ ಮಳೆಯಾಗಿದ್ದು, ವರ್ಷದ ಮೊದಲ ಮಳೆ ಇದಾಗಿದ್ದು ಬಹಳಷ್ಟು ಮಂದಿ ಮಳೆಯಲ್ಲಿ ಒದ್ದೆಯಾಗಿ ಸಂಭ್ರಮಿಸಿದರು. ಮಧ್ಯಾಹ್ನ 3 ಗಂಟೆಯ ನಂತರ ಏಕಾಏಕಿ ಕಾರ್ಮೋಡ ಕವಿದು ಹನಿಗಳು ಉದುರಿದ್ದು, ಕ್ರಮೇಣ ಹಲವು ಕಡೆಗಳಲ್ಲಿ ಧಾರಾಕಾರವಾಗಿ ಸುರಿಯಿತು.

ಕೊಡಗು ಜಿಲ್ಲೆಯ ನಾಪೋಕ್ಲು, ಹೊದ್ದೂರು, ಕಕ್ಕಬ್ಬೆ, ಕೋಕೇರಿ ಭಾಗದಲ್ಲಿ ಜೋರು ಮಳೆ ಸುರಿದರೆ, ಮಡಿಕೇರಿ, ಚೇರಂಬಾಣೆ, ಯರವನಾಡು, ಉಡೋತ್‌ ಮೊಟ್ಟೆ, ಬೆಟ್ಟಗೇರಿ, ಭಾಗಮಂಡಲ, ಮೇಕೇರಿ ವ್ಯಾಪ್ತಿಯಲ್ಲಿ 10 ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು. 

ಚಿಕ್ಕಮಗಳೂರು, ಮೂಡಿಗೆರೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತರೀಕೆರೆ, ಕಡೂರು ತಾಲೂಕುಗಳಲ್ಲಿ ಮೋಡ ಕವಿದಿತ್ತು.

Also read  ರೈತರ ಖಾತೆಗೆ ಮೋದಿ ಸರ್ಕಾರದಿಂದ ಹಣ: ಹೊಸ ಷರತ್ತೇನು? ಇಲ್ಲಿದೆ ವಿವರ

ಬೆಳೆಗಾರರಿಗೆ ಖುಶಿ ಮತ್ತು ಸಂಕಷ್ಟ 
ಚಿಕ್ಕಮಗಳೂರು ಹಾಗೂ ಕೊಡಗು ಕಾಫಿ, ಅಡಕೆ, ಕಾಳುಮೆಣಸು ಕೊಯ್ಲು ಬಿರುಸಿನಿಂದ ನಡೆಯುತ್ತಿದೆ. ಕೊಯ್ಲು ಮಾಡಿದ ಬೆಳೆಯನ್ನು ರೈತರು ಕಣಗಳಲ್ಲಿ ಒಣಗಿಸುತ್ತಿದ್ದು,ದಿಢೀರ್‌ ಮಳೆಗೆ ಕಣದಲ್ಲಿದ್ದ ಕಾಫಿ,ಕಾಳುಮೆಣಸು,ಅಡಕೆ ಒದ್ದೆಯಾಗಿದೆ. ಮಳೆ ಬೀಳುವ ಮುನ್ಸೂಚನೆ ಸಿಕ್ಕಿದ್ದರೆ ರೈತರು ಮುಂಜಾಗ್ರತೆ ಮಾಡಿಕೊಳ್ಳುತ್ತಿದ್ದರು. ಆದರೆ, ಏಕಾಏಕಿ ಮಳೆ ಸುರಿದಿದ್ದರಿಂದ ಸಮಸ್ಯೆ ಎದುರಿಸುವಂತಾಯಿತು. ಒಂದೆಡೆ ಮಳೆಯಿಂದ ಸಮಸ್ಯೆ ಎದುರಾದರೂ ಕಾಫಿ, ಕಾಳುಮೆಣಸು, ಅಡಕೆ ತೋಟಕ್ಕೆ ತಂಪೆರೆದಿದೆ. ಈಗಾಗಲೇ ಕಾಫಿ, ಕಾಳುಮೆಣಸು ಕೊಯ್ಲು ಮಾಡಿರುವವರಿಗೆ ಈ ಮಳೆ ಹೆಚ್ಚು ಖುಷಿ ಕೊಟ್ಟಿದೆ. ಇನ್ನೂ ಒಂದೆರಡು ದಿನ ಮಳೆಯಾದರೆ ಮುಂದಿನ ವರ್ಷ ಕಾಫಿ ಮತ್ತು ಕಾಳುಮೆಣಸು ಇಳುವರಿ ಹೆಚ್ಚಾಗುತ್ತದೆ. ಈ ಮಳೆ ಬೆಳೆಗಾರರ ಪಾಲಿಗೆ ವರದಾನವೇ ಆಗಿದೆ ಎಂಬುದು ಕೆಲವು ಚಿಕ್ಕಮಗಳೂರು ಕಾಫಿ ಬೆಳೆಗಾರರ ಅಭಿಪ್ರಾಯ.

ಇನ್ನೂ ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮುಗಿದಿದೆ. ಈಗ ಮಳೆ ಸುರಿದರೆ ಕಾಫಿ ಗಿಡದಲ್ಲಿ ಹೂವು ಅರಳಿ ಮುಂದಿನ ವರ್ಷದ ಫಸಲಿಗೆ ತೊಂದರೆಯಾಗಲಿದೆ. ಮಾರ್ಚ್ ಅಂತ್ಯದಲ್ಲಿ ಜೋರು ಮಳೆ ಸುರಿದರೆ ಕಾಫಿ ಬೆಳೆಗೆ ಅನುಕೂಲ ಎಂದು ರೈತರು ಹೇಳುತ್ತಾರೆ.

Also read  Heavy Rainfall damages 70% Coffee in Karnataka

Leave a Reply