CoffeeFeatured NewsResearch Articles

ಕಾಫಿ ಬಿಳಿಕಾಂಡ ಕೊರಕದ ಸಮಗ್ರ ನಿರ್ವಹಣಾ ಕ್ರಮಗಳು

ಭಾರತದಲ್ಲಿ ಅರೇಬಿಕಾ ಕಾಫಿಯನ್ನು ಭಾದಿಸುವ ಕೀಟಗಳಲ್ಲಿ ಬಿಳಿಕಾಂಡ ಕೊರಕ (ಕ್ಸೈಲೋಟ್ರಿಕಸ್‌ ಕ್ವಾಡ್ರಿಪಸ್‌) ಅತೀ ಮುಖ್ಯ ಕೀಟವಾಗಿದೆ. ಈ ಕೀಟವು ಮುಖ್ಯವಾಗಿ, ಇತರೆ ಅರೇಬಿಕಾ ಕಾಫಿ ಬೆಳೆಯುವ ದೇಶಗಳಲ್ಲಿ ಕಂಡು ಬಂದಿಲ್ಲ.ಸೆರಾಂಬಿಸಿಡ್‌ ಬೋರರ್‌ ಕುಟುಂಬಕ್ಕೆ ಸೇರಿದ ಈ ಕೀಟ ಬರೀ ಇಳುವರಿಯನ್ನಲ್ಲದೆ ಕಾಫಿ ಗಿಡವನ್ನೇ ನಾಶಪಡಿಸುವುದರಿಂದ ಆರ್ಥಿಕ ನಷ್ಟದ ಪ್ರಮಾಣ ಹೆಚ್ಚಾಗಿರುತ್ತದೆ. ಇತರೆ ಆಶ್ರಯದಾತ ಸಸ್ಯಗಳಿದ್ದರೂ ಈ ಕೀಟ ತನ್ನ ಬೆಳವಣಿಗೆಗೆ ಅರೇಬಿಕಾ ಕಾಫಿ ಗಿಡವನ್ನೇ ಅವಲಂಬಿಸುತ್ತದೆ.

ಜೀವನ ಚಕ್ರ

ಬಲಿತ ಕೀಟವು ಜೀರುಂಡೆಯಾಗಿದ್ದು,ಮುಂಬಾಗದಲ್ಲಿ ಉದ್ದನೆಯ ಒಂದು ಜೊತೆ ಕುಡಿ ಮೀಸೆ ಹೊಂದಿರುತ್ತದೆ. ರೆಕ್ಕೆ ಗಳು ಕಪ್ಪ್ಟಬಣ್ಣದ್ದಾಗಿದ್ದು ಅದರಲ್ಲಿ ಬಿಳಿಪಟ್ಟೆ ಗಳಿರುತ್ತವೆ. ಸಾಮಾನ್ಯವಾಗಿ ಗಂಡು ಹುಳುಗಳು ಹೆಣ್ಣು ಚಿಕ್ಕದಾಗಿರುತ್ತವೆ.ಹೆಣ್ಣು ಕೀಟಗಳು ಗಿಡದ ಮತ್ತು ದಪ್ಪ ರೆಂಬೆಗಳ ತೊಗಟೆಯ ಸಂದುಗೊಂದುಗಳಲ್ಲಿ ಮೊಟ್ಟೆ ಯಿಡುತ್ತವೆ. ಪ್ರತಿ ಹೆಣ್ಣು ಹುಳುವೂ ತನ್ನ ಜೀವಿತಾವವಧಿಯಲ್ಲಿ ಸುಮಾರು 100 ಮೊಟ್ಟೆಗಳನ್ನಿಡತ್ತವೆ, ಮೊಟ್ಟೆಗಳು 9-12 ದಿನಗಳಲ್ಲಿ ಒಡೆದು ಮರಿಹುಳಗಳಾಗುತ್ತವೆ.ಪೂರ್ತಿ ಬೆಳೆದ ಮರಿಹುಳುವು ಸುಮಾರು 2-3 ಸೆಂ.ಮೀ. ಉದ್ದವಿದ್ದು ತೆಳುಹಳದಿ ಬಣ್ಣದ್ದಾಗಿದ್ದು,ತಲೆಯ ಭಾಗ ಅಗಲವಾಗಿರುತ್ತದೆ. ಮರಿಹುಳುವಿನ ಹಂತ ಸುಮಾರು 10 ತಿಂಗಳಲ್ಲಿ ಕೊನೆಗೊಳ್ಳಲಿದ್ದು ಅನಂತರ ತೂಗಟೆಯ ಬದಿಯಲ್ಲಿ ತಾನೇ ಮಾಡಿದ ಗ ಗೂಡಿನಲ್ಲಿ ಕೋಶಾವಸ್ಥೆ ಯನ್ನು ಸೇರುತ್ತ ದೆ. ಕೀಟದ ಕೋಶಾವಸ್ಥೆ ಯು 3-4 ವಾರಗಳಾಗಿದ್ದು,ನಂತರ ಕೀಟವಾಗಿ (ಜೀರುಂಡೆ) ಪರಿವರ್ತನೆಗೊಳ್ಳುತ್ತದೆ. ಪ್ರೌಢ ಕೀಟವು 3-7 ದಿನಗಳ ಕಾಲ ಸುರಂಗದಲ್ಲಿ ದ್ದು ನಂತರ ಮರಿಹುಳು ಕೊರೆದಿರಿಸಿದ ರಂಧ್ರದ ಮೂಲಕ ಹೊರಕ್ಕೆ ಹಾರುತ್ತದೆ .ಮುಖ್ಯವಾಗಿ ಎರಡು ಹಾರಾಟದ ಕಾಲಗಳಿದ್ದು,ಅಕ್ಟೋಬರ್‌ ನಿಂದ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೀಟಗಳು ಹೊರಬರುತ್ತವೆ ಹಾಗು ಏಪ್ರಿಲ್-ಮೇ ತಿಂಗಳು ಅಲ್ಪಾವಧಿ ಹಾರಾಟದ ಕಾಲವಾಗಿರುತ್ತದೆ. ಆದರೆ ವರ್ಷದ ಬೇರೆ ಸಮಯದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಕೀಟ ಹಾರುವ ಸಾಧ್ಯತೆ ಇದೆ. ಮೋಡ ಕವಿದ ಮತ್ತು ಮಳೆಯ ದಿನಗಳಲ್ಲಿ ಕೀಟ ಹೊರಬರುವುದು ಸ್ವಲ್ಪ ತಡವಾಗುತ್ತದೆ. ಪ್ರೌಢ ಕೀಟದ ಜೀವಿತಾವಧಿ 34-40 ದಿನಗಳಾಗಿದೆ .ಈ ಅವಧಿಯಲ್ಲಿ ಗಂಡು ಕೀಟವು ಶ್ರವಿಸುವ ಲಿಂಗಾಕರ್ಷಕದ ಸಹಾಯದಿಂದ ಹೆಣ್ಣು ಕೀಟಗಳನ್ನು ಆಕರ್ಷಿಸಿ ,ಮಿಲೀನಗೊಂಡು ವಂಶಾಭಿವೃದ್ಧಿಯನ್ನುಂಟು ಮಾಡುತ್ತದೆ.

ಕೀಟ ಹಾನಿಯ ರೀತಿ

ಹೆಣ್ಣು ಕೀಟಗಳು ಗಿಡದ ಕಾಂಡ ಮತ್ತು ದಪ್ಪರೆಂಬೆಗಳ ತೊಗಟೆಯ ಸಂದುಗೊಂದುಗಳಲ್ಲಿ ಮೊಟ್ಟೆಯಿಡುತ್ತದೆ. ಆದರೆ ಕಾಫಿ ಗಿಡಗಳನ್ನು ತೀವ್ರವಾಗಿ ಹಾನಿಮಾಡುವುದು ಕೀಟದ ಮರಿಹುಳುವಿನ ಹಂತವಾಗಿದೆ.ಮೊಟ್ಟೆ ಯಿಂದ ಹೊರ ಬಂದ ಮರಿಹುಳು ಮೊದಲು 2 ತಿಂಗಳ ಕಾಲ ತೊಗಟೆಯಲ್ಲಿನ ತಿರುಳನ್ನು ಕೊರೆದು ತಿನ್ನುತ್ತಿರುತ್ತ ವೆ ನಂತರ ಕಾಂಡದ ಗಟ್ಟಿಭಾಗವನ್ನು ಕೊರೆದು ಒಳಗೆ ಪ್ರವೇಶಿಸಿ ಎಲ್ಲಾ ಕಡೆಗಳಲ್ಲೂ ಸುರಂಗಗಳನ್ನುಂಟು ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಸುರಂಗಗಳು ಬೇರಿನವರೆಗೂ ವ್ಯಾಪಿಸಿರುತ್ತವೆ. ಈ ಸುರಂಗಗಳಲ್ಲಿ ಕೀಟದ ಹಿಕ್ಕೆಯನ್ನು ಗಟ್ಟಿಯಾಗಿ ತುಂಬಲ್ಪಟ್ಟಿರುತ್ತದೆ. ಇದರಿಂದಾಗಿ ಕಾಂಡದಲ್ಲಿ ಆಹಾರ ,ನೀರು ಮತ್ತು ಪೋಷಕಾಂಶದ ಪೂರೈಕೆ ಕುಂಠಿತವಾಗಿ ಗಿಡಗಳ ಬೆಳವಣಿಗೆ ಕಡಿಮೆಯಾಗಿ ಸೊರಗುತ್ತವೆ. 7-8 ವರ್ಷ ವಯಸ್ಸಿನ ಗಿಡಗಳು ಒಂದೆರಡು ವರ್ಷದಲ್ಲಿ ಸಾಯುತ್ತವೆ.ದೊಡ್ಡ ಗಿಡಗಳು ಕೀಟದ ಹಾವಳಿಯನ್ನು ಕೆಲವು ವರ್ಷಗಳ ಕಾಲ ತಡೆದರು ಫಸಲು ಜೊಳ್ಳಿನ ಅಂಶ ಜಾಸ್ತಿಯಾಗಿರುತ್ತದೆ. ಇಂತಹ ಗಿಡಗಳಲ್ಲಿ ಪ್ರೌಢ ಕೀಟ ಹೊರಗೆ ಬಂದ ರಂದ್ರಗಳು ಕಾಣಿಸುತ್ತದೆ.

ಹಾವಳಿಯ ಲಕ್ಷಣಗಳು

೧. ಹೂ ಮಳೆ ಮತ್ತು ಮಳೆಗಾಲದ ನಂತರ ಕೀಟ ಬಾದಿತ ಗಿಡಗಳು ಸೊರಗಿದಂತೆ ಕಾಣುತ್ತವೆ ಹಾಗು ಎಲೆಗಳು ಮಂಕಾಗಿ ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ವಿಶೇಷವಾಗಿ, ರೆಂಬೆಯ ತುದಿಯಲ್ಲಿರುವ ಎಲೆಗಳು ಬಾಗಿರುತ್ತದೆ.
೨. ಕೀಟ ಪೀಡಿದ ಗಿಡಗಳ ಮುಖ್ಯ ಕಾಂಡದ ಮೇಲೆ ಉಂಗುರಾಕಾರದ ಸುತ್ತುಗಳು ಕಂಡುಬರುತ್ತದೆ.
೩. ಹಾನಿಯ ತೀವ್ರತೆ ಹೆಚ್ಚಾದಲ್ಲಿ ಪ್ರೌಢ ಕೀಟ ಹೊರಬಂದ ರಂದ್ರಗಳು ಕಾಣಿಸುತ್ತವೆ ಮತ್ತು ಗಿಡದಲ್ಲಿ ಫಸಲು ಕಡಿಮೆಯಾಗಿ ಜೊಳ್ಳಿನ ಅಂಶ ಜಾಸ್ತಿಯಾಗಿರುತ್ತದೆ .

ಕೀಟದ ಬೆಳವಣಿಗೆಗೆ ಅನುಕೂಲಕರವಾದ ಅಂಶಗಳು

1. ಪ್ರಕರವಾದ ಬೆಳಕು ಮತ್ತು ಹೆಚ್ಚು ಉಷ್ಣತೆಯ ಹವಮಾನವಿದ್ದಾಗ ಕೀಟಗಳ ಚಟುವಟಿಕೆ ಚುರುಕಾಗಿರುತ್ತದೆ.
2. ನೆರಳು ಕಡಿಮೆ ಇರುವ ಜಾಗದಲ್ಲಿ ಹಾಗು ತಾತ್ಕಾಲಿಕ ನೆರಳಾದ ಹಾಲುವಾಣವಿಲ್ಲದೆ ಏಕ ರೀತಿಯ ಸಿಲ್ವರ್ ಮರಗಳಿದ್ದರೆ .ಆ ಜಾಗದ ಉಷ್ಣಾಂಶ. ಹೆಚ್ಚುತ್ತದೆ. ಇದರಿಂದಾಗಿ ಕೀಟದ ಚಟುವಟಿಕೆಗೆ ಅನುಕೂಲವಾಗುತ್ತದೆ.
3. ನೆರಳಿನ ಮರಕಸಿಯನ್ನು ಬೇಸಿಗೆ ಕಾಲದಲ್ಲಿ ಮಾಡಿದರೆ ಬಿಸಿಲಿನ ತಾಪಮಾನ ಮತ್ತು ಹೆಚ್ಚು ಬೆಳಕು ನೇರವಾಗಿ ಗಿಡಗಳ ಮೇಲೆ ಬಿದ್ದು ಕೀಟದ ಹಾವಳಿ ಹೆಚ್ಚಾಗುತ್ತದೆ .
4. ಅರೇಬಿಕಾವನ್ನು ಎತ್ತರ ಕಡಿಮೆ ಇರುವ ಪ್ರದೇಶದಲ್ಲಿ ಬೆಳೆದಾಗ,ಅಲ್ಲಿನ ಉಷ್ಣಾಂಶ ಹೆಚ್ಚಾಗಿರುವವುದರಿಂದ ಕೀಟದ ಸಾಂದ್ರತೆ ಹೆಚ್ಚಾಗುತ್ತದೆ.
5. ಎಲೆ ತುಕ್ಕು ರೋಗದಿಂದ ಕಾಫಿ ಗಿಡಗಳನ್ನು ಸರಿಯಾಗಿ ಸಂರಕ್ಷಿಸದಿದ್ದಲ್ಲಿ ಎಲೆಗಳು ಉದುರಿ ಮುಖ್ಯ ಕಾಂಡ ಹಾಗೂ ರೆಂಬೆಗಳು ಕೀಟದ ಆಕರ್ಷಣೆಯ ತಾಣವಾಗುತ್ತದೆ.
6. ಬೋರರ್‌ ಪೀಡಿತ ಗಿಡಗಳನ್ನು ತೋಟದಲ್ಲಿ ಕೀಳದೆ ಬಿಡುವುದರಿಂದ ಮತ್ತು ತೋಟದ ಅಕ್ಕ ಪಕ್ಕದಲ್ಲಿ ನಿರ್ಲಕ್ಷಿತ ತೋಟವಿದ್ದರೆ, ಕೀಟದ ವಂಶಾಭಿವೃದ್ಧಿ ಗೆ ಇದು ಅನುಕೂಲವಾಗಿರುತ್ತದೆ
7. ಅರೇಬಿಕಾ ಮತ್ತು ರೋಬಸ್ಟಾ ಗಿಡಗಳನ್ನು ಒಟ್ಟಿಗೆ ಒಂದೇ ಜಾಗದಲ್ಲಿ ನೆಟ್ಟಿದ್ದು,ಸರಿಯಾದ ಹತೋಟಿ ಕ್ರಮಗಳನ್ನು ಅನುಸರಿಸದಿದ್ದರೆ ಬೋರರ್‌ ಹಾವಳಿಯು ತೀವ್ರವಾಗುತ್ತದೆ.

ಸಮಗ್ರ ನಿರ್ವಹಣಾ ಕ್ರಮಗಳು

ಈ ಕೀಟದ ಸಮಗ್ರ ನಿರ್ವಹಣೆಯನ್ನು ಮಾಡಬೇಕಾದರೆ, ಈ ಕೆಳಗೆ ಸೂಚಿಸಿದ ಕ್ರಮಗಳನ್ನು ಅನುಸರಿಸಬೇಕು .

ಅ ) ನೆರಳನ್ನು ಕಾಪಾಡುವುದು.

ಈ ಕೀಟದ ಹತೋಟಿಯ ನಿಟ್ಟಿನಲ್ಲಿ ಮುಖ್ಯವಾಗಿ ಎರಡು ಹಂತದ ನೆರಳು ಅವಶ್ಯಕವಾಗಿದೆ. ಮಿಶ್ರ ಜಾತಿಯ ನೆರಳಿನ ಮರಗಳು ಮೇಲ್ನಾಗದಲ್ಲಿ,ಮತ್ತು ಎರಡನೇ ಹಂತದಲ್ಲಿ ತಾತ್ಕಾಲಿಕ ನೆರಳಾದ ಹಾಲುವಾಣ ಮರಗಳನ್ನು ಬೆಳೆಸಬೇಕು. ಈ ನೆರಳಿನ ಮರಗಳಿಂದ ಕಾಫಿ ಗಿಡಗಳಿಗೆ 60% ರಷ್ಟು ನೆರಳು ಒದಗಿಸುವಂತಿರಬೇಕು.ನೆರಳಿನ ಮರಗಳ ಕಸಿಯನ್ನು ಬೇಸಿಗೆ ಕಾಲದಲ್ಲಿ ಮಾಡಬಾರದು.ಒಂದೇ ರೀತಿಯ ಸಿಲ್ವರ್‌ ಓಕ್‌ ನೆರಳನ್ನು ಬೆಳೆಯಬಾರದು.

ಆ) ಕೀಟ ಪೀಡಿತ ಗಿಡಗಳನ್ನು ಹುಡುಕಿ ಗುರುತಿಸಿ ನಾಶಮಾಡುವುದು

ಕೀಟ ಪೀಡಿತ ಗಿಡಗಳನ್ನು ಇಡೀ ತೋಟದಲ್ಲಿ ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳೊಳಗೆ ಹುಡುಕಿ ನಾಶ ಮಾಡಬೇಕು .ಕೀಟ ಬಾಧಿತ ಗಿಡಗಳನ್ನು ಕೀಳುವ ಮುಂಚೆ ಬುಡದಿಂದ 9 ಇಂಚು ಎತ್ತರಕ್ಕೆ ಮಟ್ಟ ಮಾಡಬೇಕು. ಬೋರರ್ ಕೀಟದ ಸುರಂಗಗಳು ಬೇರಿನೊಳಗೂ ವ್ಯಾಪಿಸದಿದ್ದಲ್ಲಿ ಹೊಸ ಚಿಗುರಿನಿಂದ ಪುನರುಜ್ಜೀವನಗೊಳಿಸಬಹುದು. ಇಲ್ಲವಾದಲ್ಲಿ ಕಿತ್ತು ಅಂದೇ ಸುಟ್ಟು ನಾಶಪಡಿಸಬೇಕು. ಅಂತಹ ಕೀಟ ಪೀಡಿತ ಗಿಡಗಳ ಬಳಕೆಯ ಅಪೇಕ್ಟೆಯಿದ್ದಲ್ಲಿ, ಅವುಗಳನ್ನು 10 ದಿನಗ ಕಾಲ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಿ ನಂತರ ಒಣಗಿಸಿ ಅವುಗಳನ್ನು ಉಪಯೋಗಿಸಬಹುದು. ಈ ರೀತಿ ಮಾಡಿದಲ್ಲಿ ಗಿಡದ ಒಳಗಿರುವ ಕೀಟದ ಎಲ್ಲಾ ಹಂತಗಳೂ ನಾಶವಾಗುತ್ತದೆ.

ಇ) ರಾಸಾಯನಿಕ ಕ್ರ ಮಗಳು

ಪ್ರೌಡ ಕೀಟ ಹಾರುವ ಕಾಲದಲ್ಲಿ (ಏಪ್ರಿಲ್‌ ತಿಂಗಳ ಎರಡನೆ ವಾರದೊಳಗೆ ಒಂದು ಬಾರಿ ಮತ್ತು ಅಕ್ಟೋಬರ್‌ ತಿಂಗಳ ಎರಡ. ವಾರದೊಳಗೆ ಒಂದು ಬಾರಿ) ಕ್ಲೋರೋಪೈರಿಫಾಸ್‌ 20 ಇಸಿ ಎಂ. ಕೀಟನಾಶಕವನ್ನು ಉಪಯೋಗಿಸಬೇಕು. ಕೀಟ ನಾಶಕ ಬಳಸುವ ವಿಧಾನವೆಂದರೆ 200 ಲೀಟರ್‌ ನೀರಿನಲ್ಲಿ 600 ಮಿ.ಲಿ ಕ್ಲೋರೋಪೈರಿಫಾಸ್‌ 20 ಇಸಿ ಯನ್ನು ಯಾವುದಾದರೂ 200 ಮಿ.ಲಿ ಅಂಟು ದ್ರಾವಣದೊಂದಿಗೆ ಬೆರೆಸಿ ಪ್ರಧಾನ ಕಾಂಡ ಮತ್ತು ರೆಂಬೆಗಳು ತೊಯ್ಯುವಂತೆ ಸಿಂಪರಣೆ ಮಾಡಬೇಕು.

ವಿಶೇಷ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕ್ರಮಗಳು

ತೋಟದ ಕೆಲವೊಂದು ಭಾಗದಲ್ಲಿ ನೆರಳಿನ ಮರಗಳಿಲ್ಲದೇ ಹೆಚ್ಚು ಖಾಲಿ ಜಾಗವಿದ್ದರೆ ಅಲ್ಲಲ್ಲಿ ಕಲ್ಲಿನಿಂದ ಕೂಡಿದ ಭಾಗವಿದ್ದರೆ,ಅಲ್ಪಕಾಲದಲ್ಲಿ ನೆರಳು ಬೆಳಸಲು ಕಷ್ಟವಾದಲ್ಲಿ, ಅಕ್ಕ-ಪಕ್ಕ ತೋಟದಲ್ಲಿ ಬಿಳಿ ಕಂಡ ಕೊರಕದ ನಿರ್ವಹಣೆಗಾಗಿ ಯಾವುದೇ ಕ್ರಮ ಅನುಸರಿಸದೇ ಸಂಪೂರ್ಣವಾಗಿ ನಿರ್ಲಕ್ಷಿ ಸಿದ್ದರೆ,ತೋಟದ ಆರೋಗ್ಯವಂತ ಗಿಡಗಳನ್ನು ರಕ್ಷಿಸಲು ಈ ಕೆಳಗೆ ಸೂಚಿಸದ ನಿರ್ವಹಣಾ ಕ್ರಮಗಳಲ್ಲಿ ಯಾವುದಾದರೊಂದನ್ನು ಅಳವಡಿಸುವುದು ಅವಶ್ಯಕ.

1. ಸುಣ್ಣದ ದ್ರಾವಣದ ಲೇಪನ

20 ಕಿ.ಗ್ರಾಂ ಸಿಂಪರಣಾ ಸುಣ್ಣವನ್ನು 200 ಲೀಟರ್‌ ನೀರಿನಲ್ಲಿ ಮತ್ತು 200 ಮೀ.ಲೀ . ಫೆವಿಕಾಲ್‌ ಡಿಡಿಎಲ್‌ ಜೊತೆಗೆ ಬೆರೆಸಿ, ಪ್ರಧಾನ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಲೇಪಿಸುವುದು. ಇದರಿಂದ ತೊಗಟೆಯಲ್ಲಿರುವ ಸಂದುಗೊಂದುಗಳು ಮುಚ್ಚಿ ಕೀಟಗಳು ಮೊಟ್ಟೆಯಿಡುವುದರಿಂದ ರಕ್ಬಣೆ ಕೊಡಬಹುದು. ಈ ಕಾರ್ಯ ವರ್ಷಕೊಮ್ಮೆ ಅಕ್ಟೋಬರ್‌ ಎರಡನೇ ವಾರದೊಳಗೆ ಮುಗಿಸಿರಬೇಕು ಹಾಗು ಲೇಪನ ಕಡಿಮೆಯಾದಲ್ಲಿ ಮತ್ತೊಮ್ಮೆ ಏಪ್ರಿಲ್‌ ನಲ್ಲಿ ಲೇಪಿಸಬಹುದು.

ಅಥವಾ

2. ತೊಗಟೆ ಉಜ್ಜುವುದು 

ಕಾಫಿ ಗಿಡದ ಮುಖ್ಯ ಕಾಂಡ ಮತ್ತು ದಪ್ಪೆರೆಂಬೆಗಳ ತೊಗಟೆಯಲ್ಲಿರುವ ಸಂದುಗೊಂದುಗಳಲ್ಲಿ ಮೊಟ್ಟೆಯನ್ನಿಡುವುದನ್ನು ತಪ್ಪಿಸಲು ತೆಂಗಿನ ನಾರಿನಿಂದ ಮಾಡಿದ ಕೈಗವಚದಿಂದ ಉಜ್ಜಿ ನಯಗೊಳಿಸಬೇಕು.ಯಾವುದೇ ತರಹದ ಹರಿತವಾದ ಉಪಕರಣಗಳನ್ನು ಬಳಸಬಾರದು.ಇದರಿಂದ ಗಿಡದ ಹಾನಿಯ ಸಾಧ್ಯತೆ ಹೆಚ್ಚಾ ಗುತ್ತದೆ. ಈ ಕ್ರಮ ಕೀಟ ಹಾರುವ ಕಾಲಕ್ಕೆ ಮುನ್ನ (ಮಾರ್ಚ್‌ ಅಥವಾ ಸೆಪ್ಟೆಂಬರ್‌) ತಿಂಗಳಲ್ಲಿ ಎರಡು ವರ್ಷಕ್ಕೊಮ್ಮೆ ಮಾಡಬೇಕು.

ಅಥವಾ

3. ಕಾಂಡವನ್ನು ಪಟ್ಟಿಯಿಂದ ಸುತ್ತುವುದು

ಸ್ವಚ್ಚಗೊಳಿಸಿದ ಖಾಲಿ ಗೊಬ್ಬರದ ಚೀಲವನ್ನು 4 ರಿಂದ 5 ಇಂಚು ಅಗಲ, ಉದ್ದವಾದ ಪಟ್ಟಿ ಬರುವಂತೆ ಕತ್ತರಿಸಿ. ಆರೋಗ್ಯಪೂರ್ಣ ಗಿಡದಲ್ಲಿರುವ ಕಂಬ ಚಿಗುರುಗಳನ್ನು ತೆಗೆದು ಗಿಡದ ಬುಡದಲ್ಲಿ ಸ್ವಚ್ಛ ಗೊಳಿಸಿ ನಂತರ ಬುಡದಿಂದ ಕಾಂಡ ಹಾಗು ದಪ್ಪ ರೆಂಬೆಗಳಲ್ಲಿಯೂ ಸುರಳಿ ಸುರಳಿಯಾಗಿ ಜಾಗ ಬಿಡದಂತೆ ಸುತ್ತಬೇಕು.ಇದರಿಂದ ಕೀಟಗಳು ಕಾಫಿ ಗಿಡದ ಮೇಲೆ ಮೊಟ್ಟೆ ಇಡುವುದನ್ನು ತಪ್ಪಿಸಬಹುದು. ಒಂದು ದಿನದಲ್ಲಿ, ಒಬ್ಬ ನುರಿತ ಕೆಲಸಗಾರ ಸುಮಾರು 40 ಗಿಡಗಳನ್ನು ಈ ರೀತಿ ಸುತ್ತ ಬಹುದು. ಈ ಕ್ರಮವನ್ನು, ಕಾಫಿ ಫಸಲು ಕೊಯ್ದು ನಂತರ ಮಳೆಗಾಲವನ್ನು ಹೊರತುಪಡಿಸಿ ವರ್ಷದ ಯಾವುದೇ ತಿಂಗಳಲ್ಲಿಯೂ ಮಾಡಬಹುದು. ಇದು ಪ್ರಾರಂಭಿಕ ಹಂತದಲ್ಲಿ ದುಬಾರಿಯೆನಿಸಿದರು ಮೂರು ವಷಗಳ ಕಾಲ ಬೇರೆ ಯಾವುದೇ ಬೊರೋರ್ ಹತೋಟಿ ಕ್ರಮ ಬೇಡವಾಗಿರುವುದರಿಂದ ಲಾಭದಾಯಕವಾಗಿ ಪರಿಣಮಿಸಿದೆ.

4. ಮೋಹಕ ಲಿಂಗಾಕರ್ಷಕ ಬಳೆಗಳನ್ನು ಬಳಸುವುದು.

ಕೀಟದ ಹಾರಾಟದ ಕಾಲವನ್ನು ಸರಿಯಾಗಿ ಗುರುತಿಸಲು ಹಾಗು ಕೀಟದ ತೀವ್ರತೆಯನ್ನು ಗಮನಿಸಲು ಮೋಹಕ ಬಲೆಯನ್ನು ಎಕರೆಗೆ ೧೦ ರಂತೆ ತೋಟದಲ್ಲಿ ಅಳವಡಿಸಬೇಕು. ಮುಖ್ಯವಾಗಿ ಕೀಟದ ಹಾರಾಟದ ಕಾಲದಲ್ಲಿ ಅಂದರೆ ಏಪ್ರಿಲ್‌ ಮತ್ತು ಅಕ್ಟೋಬರ್ ತಿಂಗಳೊಳಗೆ  ಬಳಸುವುದರಿಂದ ಕೀಟದ ಸಾಂದ್ರತೆ ಕಡಿಮೆ ಮಾಡಬಹುದು.

 

Also read  Pepper remains firm on listless market

 

Published by:

ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ
ಕಾಫಿ ಸಂಶೋಧನಾ ಕೇಂದ್ರ -577117, ಚಿಕ್ಕಮಗಳೂರು ಜಿಲ್ಲೆ , ಕರ್ನಾಟಕ, ಭಾರತ

The Director of Research,CCRI,Coffee Research Station.

Management of Coffee White Stem Borer