ಮಳೆ,ಕಾಡಾನೆ ಕಾಟಕ್ಕೆ ಕಾಫಿ,ಕರಿಮೆಣಸು,ಭತ್ತ ನಾಶ
ಪ್ರತಿಕೂಲ ಹವಾಮಾನ ಹಾಗೂ ಮಳೆಯಿಂದಾಗಿ ಕಾಡಿನಿಂದ ಹೊರಬರುತ್ತಿರುವ ಆನೆಗಳ ದಾಂಧಲೆಯಿಂದ ಕೊಡಗಿನ ಬೆಳೆಗಾರರು, ರೈತರು ಅಕ್ಷರಶಃ ನಲುಗಿದ್ದು, ಸರಕಾರದ ಯಾವುದೇ ನೆರವಿಲ್ಲದೆ ಗೋಳಿನಲ್ಲಿ ಮುಳುಗಿದ್ದಾರೆ.
ಮಳೆಯಿಂದಾಗಿ ಕಾಡಿನಿಂದ ಹೊರಬರುತ್ತಿರುವ ಕಾಡಾನೆಗಳು ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಆಹಾರ ಅರಸಿ ಬರುತ್ತಿರುವ ಅವು ಬಾಳೆ ಹಾಗೂ ಭತ್ತದ ನಾಟಿಗೆ ಸಿದ್ಧಪಡಿಸುತ್ತಿರುವ ಭತ್ತ ಸಸಿ ಮಡಿ(ಮಿಡಿ)ಯನ್ನು ತಿನ್ನುತ್ತಿವೆ. ಗುಂಪಿನಲ್ಲಿ ಏಳೆಂಟು ಆನೆಗಳು ಜಮೀನಿಗೆ ಬರುತ್ತಿರುವುದರಿಂದ ಭತ್ತದ ಸಸಿ ಮಡಿ ಸರ್ವನಾಶವಾಗುತ್ತಿದ್ದು, ಈ ಬಾರಿ ರೈತರ ಬವಣೆ ತೀವ್ರವಾಗಲಿದೆ.
“ಈ ಬಾರಿ ಒಂದು ತಿಂಗಳಿನಿಂದ ಒಂದು ದಿನವೂ ಮಳೆ ಬಿಡುವು ನೀಡಲಿಲ್ಲ. ಇದರೊಂದಿಗೆ ಭಾರಿ ಗಾಳಿಯೂ ಬೀಸುತ್ತಿದೆ. ಈ ಕಾರಣಕ್ಕಾಗಿ ಮರಗಳು ಧರೆಗೆ ಉರುಳಿವೆ. ಇದರಡಿಗೆ ಸಿಲುಕಿ ಕಾಫಿ ಹಾಗೂ ಕರಿಮೆಣಸು ಮರಗಳು ನೆಲಕಚ್ಚಿವೆ” ಎಂದು ಹುದಿಕೇರಿಯ ಬೆಳೆಗಾರ ರಾಜ್ ಕುಶಾಲಪ್ಪ ಹೇಳುತ್ತಾರೆ.