Black pepper

ಆಧುನಿಕ ಪದ್ಧತಿಯಲ್ಲಿ ಮೆಣಸು ಬೆಳೆದು ಯಶಸ್ಸು ಕಂಡ ರೈತ

By Kirehalli

October 10, 2023

ಆಧುನಿಕ ಪದ್ಧತಿ ಅಳವಡಿಸಿಕೊಂಡು ಲಾಭ ತರುವ ಅಪರೂಪದ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡಿ ಯಶಸ್ಸು ಕಾಣುತ್ತಿರುವ ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅಂತಹವರ ಸಾಲಿನಲ್ಲಿ ರಾಮನಗರ ತಾಲೂಕಿನ, ಕೈಲಾಂಚ ಹೋಬಳಿಯ ಹೊಸದೊಡ್ಡಿ ಗ್ರಾಮದ ರೈತ ಜಯರಾಮಯ್ಯ ಒಬ್ಬರು. ಹಳೇ ಪದ್ಧತಿ ಬೇಸಾಯ ಅವಲಂಬಿಸದೆ ಆಧುನಿಕ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ಸಾಮಾನ್ಯವಾಗಿ ಮಲೆನಾಡು ಭಾಗಕ್ಕಷ್ಟೇ ಸೀಮಿತವಾಗಿದ್ದ ಮೆಣಸು ಜಿಲ್ಲೆಯಲ್ಲಿ ಅಪರೂಪ. ಈಗೀಗ ಜಿಲ್ಲೆಯಲ್ಲೂ ಬೆರಳೆಣಿಕೆಯಷ್ಟು ರೈತರು ಅರಣ್ಯ ಕೃಷಿ ಮಾಡುವವರು ಮೆಣಸು ಬೆಳೆಯಲು ಚಿತ್ತ ಹರಿಸಿದ್ದಾರೆ. ಅಂತಹವರ ಪೈಕಿ ಜಯರಾಮಯ್ಯ ಒಬ್ಬರು. ಇವರು ಜಮೀನಿನಲ್ಲಿ ಅರಣ್ಯ ಕೃಷಿ ನಡೆಸಿದ್ದು ಪ್ರಾಯೋಗಿಕವಾಗಿ 100 ಕಾಳುಮೆಣಸಿನ ಬಳ್ಳಿಗಳನ್ನು ನೆಟ್ಟು ಉತ್ತಮ ಫಸಲು ಪಡೆದಿದ್ದಾರೆ. ಇಂದು ಇವರ ಜಮೀನಿನಲ್ಲಿ 500ಕ್ಕೂ ಹೆಚ್ಚಿನ ಮೆಣಸು ಗಿಡಗಳಿದ್ದು, ಲಾಭ ಕಂಡುಕೊಂಡಿದ್ದಾರೆ.

ಸಕಲೇಶಪುರದ ಕಡೆಗೆ ಹೋದ ಸಂದರ್ಭದಲ್ಲಿ ಮೆಣಸು ಕೃಷಿ ಕಂಡಿದ್ದೆ. ಅಲ್ಲಿನ ಕೃಷಿಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾಹಿತಿ ತಿಳಿದು ನಮ್ಮಲ್ಲೂ ಮೆಣಸು ಬೆಳೆಯಬಹುದಲ್ಲ ಎಂದೆನಿಸಿ ಪ್ರಾಯೋಗಿಕವಾಗಿ 100 ಸಸಿಗಳನ್ನು ನೆಡಲಾಯಿತು. ಇವು ಉತ್ತಮ ಫಸಲು ನೀಡಿದವು. ಈಗ 500ಕ್ಕೂ ಹೆಚ್ಚಿನ ಗಿಡಗಳಿವೆ. ಉತ್ತಮ ಫಸಲು ಕೈಸೇರುತ್ತಿದ್ದು ಲಾಭ ನೋಡುವಂತಾಗಿದೆ. ಮುಂದೆ ಮೆಣಸು ಮತ್ತು ವಿಶೇಷ ತಳಿಯ ಹಿಮಾಮ್ ಪಸಂದ್ ಮಾವು ಬೆಳೆ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಬೇಕು ಎಂಬ ಚಿಂತನೆ ಇದೆ.

ಜಯರಾಮಯ್ಯ, ಮಾದರಿ ಕೃಷಿಕಸಂಪರ್ಕ ವಿವರಮಾಹಿತಿಗೆ ಸಂಪರ್ಕಿಸಬೇಕಾದ ಮೊ.ಸಂಖ್ಯೆ 99729 60372 (ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ)