ಅಭಿವೃದ್ಧಿ ಅಥವಾ ವಿನಾಶ : ಕೊಡಗು ಪರಿಸರ ಸಂಘಟನೆಗಳ ಪ್ರತಿಭಟನೆ
ಅಭಿವೃದ್ಧಿ ನೆಪದಲ್ಲಿ ಕೊಡಗು ಜಿಲ್ಲೆಯ ಪರಿಸರದ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆಪಾದಿಸಿ ವಿವಿಧ ಪರಿಸರ ಸಂಘಟನೆಗಳು ನಗರದಲ್ಲಿ ಕಳೆದ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದವು.
ನಗರದ ಹಳೆ ಕೋಟೆ ಸಭಾಂಗಣ ದಿಂದ ಆರಂಭವಾದ ರ್ಯಾಲಿ ನಗರ ಪೊಲೀಸ್ ಠಾಣೆ ರಸ್ತೆ,ಮೈಸೂರು ರಸ್ತೆ,ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಸಾಗಿ ಕಾವೇರಿ ಕಲಾ ಕ್ಷೇತ್ರಕ್ಕೆ ಬಂದು ತಲುಪಿತು.
‘2015ರಲ್ಲಿ ಮೈಸೂರಿನಿಂದ ಕೇರಳದ ಕೋಯ್ಕೋಡ್ಗೆ 400 ಕೆ.ವಿ.ಯ ವಿದ್ಯುತ್ ಮಾರ್ಗಕ್ಕೆ ಕೊಡಗಿ ನಲ್ಲಿ 56 ಸಾವಿರ ಮರಗಳನ್ನು ಕಡಿಯ ಲಾಗಿತ್ತು. ಅದರ ಪರಿಣಾಮವನ್ನು ಇಂದಿಗೂ ನಾವು ಎದುರಿಸುತ್ತಿದ್ದೇವೆ. ಈಗ ಎರಡು ರೈಲು ಮಾರ್ಗ ಹಾಗೂ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.ಎರಡು ಯೋಜನೆಗಳೂ ಕಾರ್ಯಗತ ವಾದರೆ ಪುಟ್ಟ ಜಿಲ್ಲೆ ಇಬ್ಭಾಗವಾಗಲಿದೆ.ಅಭಿವೃದ್ಧಿ ಯೋಜನೆಯಿಂದ ಕೊಡಗಿನ ಜನರಿಗೆ ಪ್ರಯೋಜನವಿಲ್ಲ.ಅಧಿಕಾರಿ ಗಳಿಗೆ,ಗುತ್ತಿಗೆದಾರರಿಗೆ ಮಾತ್ರ ಲಾಭ’ ಎಂದು ಸಭೆಯಲ್ಲಿ ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಅಧ್ಯಕ್ಷರೂ ಆಗಿರುವ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ದೂರಿದರು.
‘ಕುಶಾಲನಗರದಿಂದ ಮಕ್ಕಂದೂರು ವರೆಗೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ₹ 1,587 ಕೋಟಿ, ಮೈಸೂರಿನಿಂದ ತಲಚೇರಿ ತನಕ ರೈಲ್ವೆ ಮಾರ್ಗಕ್ಕೆ ₹ 3,700 ಕೋಟಿ ವೆಚ್ಚವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.ಈ ಮಾರ್ಗ ಯಾರ ಪ್ರಯೋಜನಕ್ಕೆ’ ಎಂದು ಪ್ರಶ್ನಿಸಿದರು.
‘ನಾಪೋಕ್ಲು ಸಮೀಪದ ಯವಕ ಪಾಡಿಯಲ್ಲಿ ಖಾಸಗಿ ರೆಸಾರ್ಟ್ವೊಂದು ಅಲ್ಲಿನ ಮೂಲ ನಿವಾಸಿಗಳಿಗೆ ತೊಂದರೆ ನೀಡುತ್ತಿದೆ. ನೂರಾರು ವರ್ಷಗಳಿಂದ ಅಡಿಯ ಜನಾಂಗದವರು ಸಂಚರಿಸು ತ್ತಿದ್ದ ರಸ್ತೆಯನ್ನೇ ಬಂದ್ ಮಾಡಲಾಗಿದೆ. ನಮಗೆ ನ್ಯಾಯಬೇಕು’ ಎಂದು ಸಮುದಾಯ ಮುಖಂಡರಾದ ಸುಂದರಿ ಆಗ್ರಹಿಸಿದರು.
‘ಪಶ್ಚಿಮಘಟ್ಟವನ್ನು ಉಳಿಸುವುದು ಅನಿವಾರ್ಯ. ಅಭಿವೃದ್ಧಿ ನೆಪದಲ್ಲಿ ಪರಿಸರ ಹಾಳಾದರೆ ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧರಾಗಿ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಕರೆ ನೀಡಿದರು.