CoffeeFeatured News

ಪ್ಯಾಕೇಜ್ ಭರವಸೆ ಹುಸಿ:ಕೊಡಗು ಕಾಫಿ ಬೆಳೆಗಾರರು ಕಂಗಾಲು

ಕೊಡಗಿನಲ್ಲಿ ಕಾಫಿ ಬೆಳೆಗಾರರು ಪರಿಹಾರ ದೊರೆಯಬಹುದು ಎಂದು ಕಾದು ಇದೀಗ ನಿರಾಶರಾಗಿದ್ದು, ಪರ್ಯಾಯ ಮಾರ್ಗ ಕಾಣದೆ ಕಾಫಿ ತೋಟದ ನಿರ್ವಹಣೆಯನ್ನೇ ಕೈಬಿಡುವ ಹಂತಕ್ಕೆ ಬಂದು ತಲುಪಿದ್ದಾರೆ. 

ಈ ಬಾರಿ ಜಿಲ್ಲೆಯಲ್ಲಿ ಬಿದ್ದ ಮಹಾಮಳೆ ಹಾಗೂ ಭೂಕುಸಿತದಿಂದ ಬಹುತೇಕ ಮಂದಿ ಕಂಗಾಲಾಗಿದ್ದಾರೆ. ಯಾವುದಾದರು ಒಂದು ರೀತಿಯಲ್ಲಿ ಮಳೆಯ ಕಾಟಕ್ಕೆ ಸಿಲುಕಿ ಸಂತ್ರಸ್ತರಾದವರೇ ಹೆಚ್ಚು. ಕೇವಲ ಮನೆ ಹಾಗೂ ಆಸ್ತಿ ಕಳೆದುಕೊಂಡವರು ಮಾತ್ರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ, ಉಳಿದಂತೆ ನಷ್ಟವನ್ನು ವಿವಿಧ ರೂಪದಲ್ಲಿ ಜನರು ಅನುಭವಿಸಿ ಅಸಹಾಯಕರಾಗಿದ್ದಾರೆ. ಕಾರ್ಮಿಕರು ಕೂಡ ಇಂದು ಜಿಲ್ಲೆಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದು, ಸಮಸ್ಯೆಯ ಗಂಭೀರತೆಯನ್ನು ಹಾಗೂ ತೀವ್ರತೆಯನ್ನು ಉಭಯ ಸರಕಾರಗಳು ಅರಿತುಕೊಳ್ಳುವಲ್ಲಿ ವಿಫಲವಾಗಿವೆ. 

ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಫಸಲು ಈ ಬಾರಿ ಕೈಕೊಟ್ಟಿದೆ. ಮಳೆಯಿಂದಾಗಿ ಜಿಲ್ಲೆಯ ಸುಮಾರು 40 ಗ್ರಾಮಗಳಲ್ಲಿ ತೀವ್ರ ನಷ್ಟವನ್ನು ಅನುಭವಿಸುವಂತಾಗಿದೆ. ಉಳಿದ ಹಲವು ಗ್ರಾಮಗಳಲ್ಲಿ ಶೇ.50ರಷ್ಟು ಬೆಳೆಗೆ ಹಾನಿಯಾಗಿದೆ. ಹಲವು ಭಾಗಗಳಲ್ಲಿ ಭೂಕುಸಿತದಿಂದಾಗಿ ಕೇವಲ ಫಸಲು ಮಾತ್ರವಲ್ಲದೆ ಕಾಫಿ ತೋಟಗಳೇ ಸಮಾಧಿಯಾಗಿರುವ ಹಿನ್ನೆಲೆಯಲ್ಲಿ ಈ ಮಂದಿಯ ಬದುಕು ನರಕಸದೃಶ್ಯವಾಗಿದ್ದು, ಸ್ಪಂದಿಸುವವರಿಲ್ಲದೆ ದಿಕ್ಕು ತೋಚದೆ ಕುಳಿತಿದ್ದಾರೆ. 

ಜಿಲ್ಲೆಯಲ್ಲಿ ಶೇ.40ರಿಂದ 50ರಷ್ಟು ಕಾಫಿ ಬೆಳೆಯುವ ಮುಖ್ಯ ಪ್ರದೇಶಗಳಲ್ಲಿ ನಷ್ಟವಾಗಿರುವ ಕುರಿತು ವರದಿ ಬಂದಿದೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಬಣಿಸುವಂತೆ ಮಾಡಲಿದೆ. ಕಾಫಿ ಬೆಳೆ ನಷ್ಟವಾದರೆ ಅಥವಾ ಬೆಲೆ ಕುಸಿದರೆ ಇಡೀ ವರ್ಷ ಜಿಲ್ಲೆಯಲ್ಲಿ ಪ್ರಮುಖ ಚಟುವಟಿಕೆಗಳು ಸ್ಥಗಿತವಾಗುತ್ತವೆ. ವ್ಯಾಪಾರ ಕುಸಿದು ಅದನ್ನು ನಂಬಿದ್ದವರು ತೊಂದರೆ ಅನುಭವಿಸಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಬ್ಯಾಂಕ್‌ ಹಾಗೂ ಕೃಷಿ ಸಹಕಾರ ಸಂಘಗಳಲ್ಲಿ ಸಾಲ ವಸೂಲಿಯ ಮೇಲೆ ಕೂಡ ಧಕ್ಕೆಯಾಗಲಿದೆ. ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. 

ಕೇವಲ ಕಾಫಿ ಮಾತ್ರವಲ್ಲದೆ ತೋಟಗಾರಿಕೆ ಹಾಗೂ ಸಂಬಾರ ಬೆಳೆಗಳಿಗೆ ಕೂಡ ಸಾಕಷ್ಟು ಹಾನಿಯಾಗಿದೆ. ಶೇ.35ರಷ್ಟು ಫಸಲು ಈ ಬಾರಿ ಕುಸಿಯಲಿದೆ. ಕಾಫಿಯೊಂದಿಗೆ, ಅಡಕೆ, ಏಲಕ್ಕಿ, ಕರಿಮೆಣಸು, ಭತ್ತ ಕೂಡ ನೆಲ ಕಚ್ಚಿದೆ. ಕಾಫಿ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಪ್ರತಿ ಎಕರೆಗೆ ಇಂತಿಷ್ಟು ಎಂದು ಮಾರುಕಟ್ಟೆ ಧಾರಣೆ ಅನುಸರಿಸಿ ಪರಿಹಾರ ನೀಡಬೇಕು ಎಂಬ ಬೇಡಿಕೆ ಬೇಡಿಕೆಯಾಗಿಯೇ ಉಳಿದುಕೊಂಡಿದೆ ಎಂದು ಜಿಲ್ಲೆಯ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪ್ಯಾಕೇಜ್‌ ಹುಸಿ: ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಕೊಡಗು ಪ್ಲಾಂಟರ್ಸ್‌ ಅಸೋಸಿಯೇಷನ್‌ ಸೇರಿದಂತೆ ಹಲವು ಸಂಘ ಸಂಸ್ಥೆಗಳು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಸಾಕಷ್ಟು ಬಾರಿ ಮನವರಿಕæ ಮಾಡಿಕೊಟ್ಟಿವೆ. ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಲ್ಲದೇ, ಕೊಡಗಿಗೆ ಆಗಮಿಸಿದ ಸಂದರ್ಭ ಕೂಡ ಮನವಿ ಸಲ್ಲಿಸಿವೆ. ಕೇಂದ್ರ ಸರಕಾರದ ಸಚಿವರು ಹಾಗೂ ಪ್ರಮುಖ ಅಧಿಕಾರಿಗಳನ್ನು ದಿಲ್ಲಿಯಲ್ಲಿ ಹಾಗೂ ಬೆಂಗಳೂರಿಗೆ ಆಗಮಿಸಿದ ಸಂದರ್ಭ ಭೇಟಿಯಾಗಿ ಕಾಫಿ ಬೆಳೆಗಾರರ ಸ್ಥಿತಿಯನ್ನು ವಿವರಿಸಿ ವಿಶೇಷ ಪ್ಯಾಕೇಜ್‌ ನೀಡುವಂತೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಈಗಿನ ಸ್ಥಿತಿಯಿಂದ ಬೆಳೆಗಾರರನ್ನು ಪಾರು ಮಾಡಲು ವಿಶೇಷ ಪ್ಯಾಕೇಜ್‌ ಘೋಷಣೆ ಮಾತ್ರ ಪರಿಹಾರ ಎಂದು ಹೇಳಿದ್ದು, ಎಲ್ಲರೂ ಪರಿಶೀಲಿಸುವ ಭರವಸೆ ನೀಡಿದ್ದರು. ಇಲ್ಲಿತನಕ ಇದರ ಈಡೇರಿಕೆಯ ಯಾವುದೇ ಪ್ರಯತ್ನ ನಡೆಯದಿರುವುದು ಬೆಳೆಗಾರರು ನಿರಾಶರಾಗುವಂತೆ ಮಾಡಿದೆ. 

ಸಾಲ ಮನ್ನಾ ಕನಸು 

ಜಿಲ್ಲೆಯ ಸುಮಾರು 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಗ್ರಾಮಗಳಲ್ಲಿ ಕಾಫಿ ಬೆಳೆ ಸಂಪೂರ್ಣವಾಗಿ ಹಾನಿಯಾಗಿವೆ. ಈ ಗ್ರಾಮಗಳ ಎಲ್ಲ ರೈತರ ಹಾಗೂ ಬೆಳೆಗಾರರು ವಿವಿಧ ಬ್ಯಾಂಕ್‌, ಸಹಕಾರ ಸಂಘ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಾಲದ ಅಸಲು ಮನ್ನಾ ಮಾಡುವುದಿರಲಿ, ಅದರ ಮೇಲಿನ ಬಡ್ಡಿಯನ್ನು ಮಾಫಿ ಮಾಡುವ ಪ್ರಯತ್ನ ಕೂಡ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಗತ್ಯವಾಗಿ ಕಾಫಿ ತೋಟಗಳ ನಿರ್ವಹಣೆಗೆ ಬೇಕಾಗಿರುವ ನೆರವಿಗೆ ನೂತನ ಸಾಲ ಪಡೆಯುವುದು ಕೂಡ ಅಸಾಧ್ಯವಾಗಿದೆ. ಪರಿಣಾಮ, ಬಹುತೇಕ ಮಂದಿ ತೋಟದ ಕಡೆ ಹೋಗುವುದನ್ನೇ ಬಿಟ್ಟಿದ್ದಾರೆ. 

Also read  Coffee Prices (Karnataka) on 12-05-2022

Leave a Reply