ಬಂಗಾಳ ಕೊಲ್ಲಿ ಚಂಡಮಾರುತ ಪ್ರಭಾವ: ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದರಿಂದ ರಾಜ್ಯದಲ್ಲಿ ನೈಋುತ್ಯ ಮುಂಗಾರು ಮತ್ತೆ ಚುರುಕಾಗಿದೆ. ಇದರಿಂದಾಗಿ ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸೆ.23 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಕೊರತೆ ಎದುರಿಸುತ್ತಿರುವ ಉತ್ತರ ಕರ್ನಾಟಕಕ್ಕೆ ಇದು ಶುಭ ಸುದ್ದಿಯಾದರೂ ಅಪಾಯಗಳೂ ಉಂಟಾಗುವ ಸಾಧ್ಯತೆಯೂ ಇದೆ ಎನ್ನುತ್ತದೆ ಹವಾಮಾನ ಇಲಾಖೆ.
ಗುರುವಾರ ಸಂಜೆಯಿಂದಲೇ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಗದಗ, ವಿಜಯಪುರ, ಸೇಡಂ, ಕಮಲಾಪುರ, ಕೊಪ್ಪಳ, ಮುದ್ದೇಬಿಹಾಳ, ಕಲಬುರಗಿ, ಚಿತ್ತಾಪುರ, ಯಾದಗಿರಿ, ಸಂಡೂರು, ಹಗರಿಬೊಮ್ಮನಹಳ್ಳಿಯಲ್ಲಿ ಮಳೆ ಸುರಿದಿದೆ. ಶುಕ್ರವಾರದಿಂದ ಮಳೆ ಜೋರಾಗುವ ಸಾಧ್ಯತೆ ಇದೆ. ಮುಂಗಾರು ಆರಂಭದಿಂದಲೂ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಭಾರಿ ಮಳೆ ಬಂದಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ಮುಂಗಾರು ಕೊನೆಗೊಳ್ಳುವ ಅವಧಿಯಲ್ಲಿ ಉತ್ತರ ಭಾಗದಲ್ಲಿ ಜೋರಾದ ಮಳೆ ಶುರುವಾಗಿದೆ.
”ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆ ಸುರಿಯಲಿದೆ. ಈ ಭಾಗದಲ್ಲಿ ಮುಂಗಾರು ಮತ್ತೆ ಚುರುಕಾಗಲು ಆರಂಭಿಸಿದೆ. ಈ ತಿಂಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆ ಇರುತ್ತಿತ್ತು. ತಿಂಗಳ ಕೊನೆಯ ದಿನಗಳಲ್ಲಿ ಮಳೆ ಆರಂಭವಾಗಿದೆ. ಅಕ್ಟೋಬರ್ನಲ್ಲೂ ಹೆಚ್ಚು ಮಳೆ ಬರುವ ಸಾಧ್ಯತೆ ಇದೆ,” ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.