ಕಾಫೀ ತೋಟದಲ್ಲಿನ ಶಂಖುಹುಳುಗಳ ನಿಯಂತ್ರಣ ಹೇಗೆ ?
ವರದಿಗಳ ಪ್ರಕಾರ ಸಕಲೇಶಪುರ ತಾಲ್ಲೂಕಿನ ಕಾಫೀ ತೋಟಗಳಲ್ಲಿ ಕಂಡುಭರುತಿರುವ ದೈತ್ಯಾಕಾರದ ಶಂಖುಹುಳುಗಳ ನಿಯಂತ್ರಣ ಹೇಗೆಂದು ಕಾಫಿ ಮಂಡಳಿಯ ವಿಸ್ತರಣಾ ಅಧಿಕಾರಿ ಡಾ.ತಂಗರಾಜ್ ತಿಳಿಸಿದ್ದಾರೆ.
ಶಂಖುಹುಳುಗಳ ಸಂತತಿಯು ಅನಿಯಮಿತ ಮಳೆ, ಅತಿ ಉಷ್ಣಾಂಶ, ಸುಲಭವಾಗಿ ದೊರಕುವ ಆಹಾರ ಮೂಲಗಳಿಂದ ಹೆಚ್ಚುತ್ತದೆ. ಈ ಹುಳು 50ರಿಂದ 200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನಲ್ಲಿ ಇಡುತ್ತವೆ.
ಈ ಹುಳುಗಳ ನಿಯಂತ್ರಣ ಅತಿ ಆವಶ್ಯವಾಗಿದ್ದು, ಹೆಚ್ಚಾದರೆ ಬಹಳಷ್ಟು ಪ್ರಮಾಣದ ಬೆಳೆ ನಾಶ ಆಗುತ್ತದೆ.
ಮುಖ್ಯವಾಗಿ ಕೊಳೆತ ಮರದ ತುಂಡುಗಳು ಹಾಗೂ ಇತರ ಆಶ್ರಯದಾತ ಗಿಡಗಳನ್ನು ತೆಗೆದು ಹಾಕಬೇಕು. ಇವುಗಳು ಶಂಖುಹುಳುಗಳ ಅಡಗುತಾಣಗಳಾಗಿವೆ.
1.ಅಕ್ಕಿ ತೌಡಿನ ಬೈಟ್:
60 ಕೆ.ಜಿ. ಅಕ್ಕಿ ತೌಡಿಗೆ 160 ಗ್ರಾಂನಷ್ಟು ಲಾರ್ವಿನ್ ಮತ್ತು 300 ಮಿಲಿಯಷ್ಟು ಹರಳೆಣ್ಣೆಯನ್ನು ಸೇರಿಸಬೇಕು. ನಂತರ 5 ಲೀಟರ್ ನೀರಿನಲ್ಲಿ 6 ಕೆ.ಜಿ. ಬೆಲ್ಲವನ್ನು ಕರಗಿಸಿ ತಯಾರಿಸಿದ ದ್ರಾವಣವನ್ನು ಅಕ್ಕಿ ತೌಡಿನೊಂದಿಗೆ ಮಿಶ್ರಣ ಮಾಡಬೇಕು.
ಮಿಶ್ರಣವು ಅತಿಯಾಗಿ ಒಣಗಿರದೆ, ಹೆಚ್ಚು ತೇವವೂ ಆಗಿರದಂತೆ ನೋಡಿಕೊಳ್ಳಬೇಕು. 150 ಗ್ರಾಂನಷ್ಟು ತೂಕದ 400 ಉಂಡೆಗಳನ್ನು ತಯಾರಿಸಿ 4 ಕಾಫಿ ಗಿಡಗಳ ಮಧ್ಯದಲ್ಲಿ ಸುಮಾರು 1 ಎಕರೆ ಪ್ರದೇಶದಲ್ಲಿ ಇಡಬೇಕು. ಇದು ಹುಳುವನ್ನು ಆಕರ್ಷಿಸುತ್ತದೆ. ಇದನ್ನು ತಿಂದ ಹುಳುಗಳು ಸಾಮೂಹಿಕವಾಗಿ ಸಾಯುತ್ತವೆ ಎಂದು ಡಾ.ತಂಗರಾಜ್ ಹೇಳುತ್ತಾರೆ.
2.ಮೆಟಾಲ್ಡಿ ಹೈಡ್ (Metaldehyde) ಉಂಡೆಗಳು:
ಕಾಫಿ ಗಡಿಗಳ ಬೇರುಗಳ ಬುಡದಲ್ಲಿ ಅಥವಾ ಹುಳುವಿನ ಚಲನವಲನ ಕಂಡು ಬಂದ ಪ್ರದೇಶದಲ್ಲಿ ಶೇ 5ರಷ್ಉ ಮೆಟಾಲ್ಡಿಹೈಡ್ ಉಂಡೆಗಳನ್ನು ಸೂರ್ಯಾಸ್ತಮಾನಕ್ಕೂ ಮೊದಲೇ ಸಮನಾಗಿ ಹರಡಬೇಕು. ಈ ಹುಳುಗಳು ರಾತ್ರಿ ವೇಳೆ ಚುರುಕಾಗಿ ಆಹಾರವನ್ನು ಹುಡುಕಿಕೊಂಡು ತಿರುಗುತ್ತವೆ. ಮರುದಿನ ಬೆಳಿಗ್ಗೆ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವುದಕ್ಕೆ ಸುಲಭ ಎನ್ನುತ್ತಾರೆ.
ವ್ಯಾಪಕವಾಗಿ ಹರಡುತಿರುವ ಈ ಹುಳುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಕೃಪೆ: ಪ್ರಜಾವಾಣಿ