AgricultureAgrinewsFeatured News

14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ:ಭತ್ತದ ರೈತರಿಗೆ ಖುಷಿ

ಲೋಕಸಭೆ ಚುನಾವಣೆಗೆ 10 ತಿಂಗಳು ಇರುವಾಗಲೇ ದೇಶದ ರೈತರ ಮನಗೆಲ್ಲಲು ಹೊರಟಿರುವ ಕೇಂದ್ರದ ನರೇಂದ್ರ ಮೋದಿ ಸರಕಾರ "ಭರ್ಜರಿ ಬೆಂಬಲ ಬೆಲೆ' ಘೋಷಿಸುವ ಮೂಲಕ ಮುಂಗಾರಿನ ಬಂಪರ್‌ ಗಿಫ್ಟ್ ನೀಡಿದೆ. ರಾಜ್ಯದಲ್ಲೂ ಹೆಚ್ಚಾಗಿ ಬೆಳೆಯುವ ಭತ್ತ, ರಾಗಿ, ಜೋಳ ಸಹಿತ ಮಳೆಗಾಲದ 14 ಬೆಳೆಗಳಿಗೆ ನೀಡುವ ಬೆಂಬಲ ಬೆಲೆಯನ್ನು ಪರಿಷ್ಕರಿಸಿದೆ. ಕರಾವಳಿಯಲ್ಲಿ ಮುಖ್ಯವಾಗಿ ಬೆಳೆಯುವ ಭತ್ತದ ಬೆಂಬಲ ಬೆಳೆಯನ್ನು ದಾಖಲೆಯ 200 ರೂ.ಗಳಷ್ಟು ಹೆಚ್ಚಿಸಲಾಗಿದೆ. ಗರಿಷ್ಠವೆಂದರೆ ಶೇ.53ರಷ್ಟು ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.

ಭತ್ತ ಜಿಗಿತ: ಭತ್ತದ ರೈತರಿಗೆ ಖುಷಿ 
ಭತ್ತಕ್ಕೆ ಪ್ರತಿ ಕ್ವಿಂಟಾಲ್‌ನ ಕನಿಷ್ಠ ಬೆಂಬಲ ಬೆಲೆ ದಾಖಲೆಯ 200 ರೂ.ಗಳ ಜಿಗಿತ ಕಂಡಿದೆ. ಪ್ರತಿ ಸಲ ಬೆಂಬಲ ಬೆಲೆ ನಿಗದಿಪಡಿಸುವಾಗ ಭತ್ತ ಕೇವಲ 50-60 ರೂ. ಏರಿಕೆ ಕಾಣುತ್ತಿತ್ತು. ಈ ಹಿಂದೆ 2012-13ರಲ್ಲಿ 120 ರೂ. ಹೆಚ್ಚಳ ಕಂಡಿದ್ದೇ ದಾಖಲೆಯಾಗಿತ್ತು. ಮೋದಿ ಸರಕಾರ ಅದನ್ನು ಮುರಿದು ಹೊಸ ವಿಕ್ರಮ ಸ್ಥಾಪಿಸಿ, ರೈತ ಕಲ್ಯಾಣದ ಮಂತ್ರ ಜಪಿಸಿದೆ. 

ಒಂದು ಕ್ವಿಂಟಲ್‌ ಭತ್ತ (ಸಾಮಾನ್ಯ ತಳಿ) ಬೆಳೆಯಲು ರೈತನಿಗೆ 1,166 ರೂ. ವೆಚ್ಚ ತಗಲುತ್ತದೆ ಎಂದು ದರ ನಿಗದಿ ಕುರಿತ ಸರಕಾರದ ಸಲಹಾ ಮಂಡಳಿ (ಸಿಎಸಿಪಿ) ತಿಳಿಸಿದ್ದು, ಈ ಆಧಾರದ ಮೇಲೆ 200 ರೂ.ಬೆಂಬಲ ಬೆಲೆ ಘೋಷಿಸುವ ಮೂಲಕ ಕ್ವಿಂಟಲ್‌ ಭತ್ತದ ಬೆಲೆಯನ್ನು 1750 ರೂ.ಗೆ ಏರಿಕೆ ಮಾಡಿದಂತಾಗಿದೆ. ಎ ಗ್ರೇಡ್‌ ಭತ್ತದ ಕ್ವಿಂಟಲ್‌ ಉತ್ಪನ್ನ ವೆಚ್ಚ 1,770 ರೂ. ಎಂದು ಅಂದಾಜಿಸಲಾಗಿದ್ದು ಇದರಕ್ಕೆ 180 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ.ಅದರ ಒಟ್ಟು ವೆಚ್ಚದ ಮೇಲೆ ಶೇ.50-51ರಷ್ಟು ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. 

ಕ್ವಿಂಟಲ್‌ವೊಂದಕ್ಕೆ 200 ರೂ. ಬೆಂಬಲ ಬೆಲೆ ಹೆಚ್ಚಳ ಘೋಷಿಸಿರುವುದು ಇದುವರೆಗಿನ ದಾಖಲೆ. ಈ ಹಿಂದೆ (2013) ಚುನಾವಣೆ ಹೊಸ್ತಿಲಲ್ಲಿ ಯುಪಿಎ-2 ಸರಕಾರ ಕ್ವಿಂಟಲ್‌ಗೆ 170 ರೂ.ಬೆಂಬಲ ಬೆಲೆ ಘೋಷಿಸಿದ್ದೇ ಇದುವರೆಗಿನ ಗರಿಷ್ಠ ಮೊತ್ತ ಎನಿಸಿತ್ತು. ಇದಾಗಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅವಸರದ ತೀರ್ಮಾನಗಳಿಗೆ ಕೈಹಾಕದೇ ರೈತರ ಬವಣೆ ಅರ್ಥ ಮಾಡಿಕೊಳ್ಳುವ ಕಸರತ್ತಿನಲ್ಲಿಯೇ ಹೆಚ್ಚಿನ ಅವಧಿ ಕಳೆಯಿತು. ಕಳೆದ ನಾಲ್ಕು ವರ್ಷಗಳಲ್ಲಿ ಭತ್ತದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು 50ರಿಂದ 80 ರೂ.ನಡುವೆ ನಿಂತು ಹೋಗಿತ್ತು. 

Read more:www.udayavani.com

Also read  ಎಚ್ಚರವಿರಲಿ: ಜೂನ್ 6, 7ರಂದು ರಾಜ್ಯದಲ್ಲಿ ಭಾರೀ ಮಳೆ..!

Leave a Reply